Gig Workers: ರಾಜ್ಯದ ಕಾರ್ಮಿಕರಿಗೆ ಹೊಸ ವರ್ಷಕ್ಕೂ ಮೊದಲೇ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ, ಸಿಗಲಿದೆ 4 ಲಕ್ಷ ರೂ ಉಚಿತ
ಕಾರ್ಮಿಕರಿಗೆ ಸಿಗಲಿದೆ 4 ಲಕ್ಷಗಳ ಉಚಿತ ವಿಮೆ, ಷರತ್ತುಗಳು ಅನ್ವಯ
Insurance Facility For Karnataka Gig Workers: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaiah) ಅವರು ಗಿಗ್ ಕಾರ್ಮಿಕರಿಗಾಗಿಯೇ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು. ಗಿಗ್ ಕಾರ್ಮಿಕರು ಹಗಲು ರಾತ್ರಿ ಶ್ರಮಿಸುತ್ತಿದ್ದು, ಅಂತವರಿಗೆ ಆರ್ಥಿಕ ನೆರವಾಗಲಿ ಎಂದು ಈ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ.
ಡಿಸೆಂಬರ್ 16 ರಂದು ಧಾರವಾಡಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕೆಸಿಡಿ ಮೈದಾನದಲ್ಲಿ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ತ್ರಿಚಕ್ರ ವಾಹನಗಳು ಕೆಸಿಡಿ ಮೈದಾನದಲ್ಲಿ ಇರಿಸಲಾಗಿದ್ದು, ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಗಿಗ್ ಕಾರ್ಮಿಕರ ನೋಂದಣಿ ಹಾಗೂ ಗುರುತಿನ ಚೀಟಿ ವಿತರಣೆಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
ಗಿಗ್ ಕಾರ್ಮಿಕರಿಗೆ ಜೀವವಿಮೆ ಸೌಲಭ್ಯ
ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಸುಮಾರು 3 ಲಕ್ಷದಷ್ಟು ಇದೆ. ಇಂತಹ ಕಾರ್ಮಿಕರಿಗೆ 2 ಲಕ್ಷ ಅಪಘಾತ ವಿಮೆ ಹಾಗೂ 2 ಲಕ್ಷ ಜೀವವಿಮೆಯನ್ನು ಸರ್ಕಾರವು ಇತ್ತಿಚಿಗೆ ಘೋಷಿಸಿದ್ದು, ಇಂತಹ ಗಿಗ್ ಕಾರ್ಮಿಕರ ನೋಂದಣಿ ಹಾಗೂ ಗುರುತಿನ ಚೀಟಿ ವಿತರಣೆಯ ಕಾರ್ಯಕ್ರಮವು ಈ ವೇದಿಕೆಯಲ್ಲಿ ಜರುಗಲಿವೆ.
ವಿವಿಧ ಫುಡ್ಡೆಲಿವರಿ ಕಂಪನಿಗಳಾದ ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್ಕಾರ್ಟ್, ಬಿಗ್ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ನಂತ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೂ ಸರ್ಕಾರದ ಈ ವಿಮೆ ಸಿಗಲಿದೆ.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು
ಗಿಗ್ ಕಾರ್ಮಿಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ್ದು, ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಅಪಘಾತದಿಂದ ಮರಣ, ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಗಿಗ್ ಕಾರ್ಮಿಕರು, ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ಸೂಕ್ತ ವಿಮಾ ಸೌಲಭ್ಯ ಒದಗಿಸುವ ಮೂಲಕ ಸಂಕಷ್ಟದಿಂದ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ.
ಪತ್ರಿಕಾ ವಿತರಕರಿಗೆ ವಿಮಾ ಸೌಲಭ್ಯ
ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುವ ಕಾರ್ಮಿಕರು ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಸುಮಾರು 45 ಸಾವಿರ ಪತ್ರಿಕಾ ವಿತರಕರಿಗೆ ಈ ವಿಮಾ ಯೋಜನೆ ಉಪಯೋಗವಾಗಲಿದೆ. ಈ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸದರಿ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ.
ಈ ಎಲ್ಲಾ ಯೋಜನೆಗೆ ಸಹ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸಹಾಯ ಸೌಲಭ್ಯಗಳ ಮಂಜೂರಾತಿ ಆದೇಶವನ್ನು ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ. ಹೀಗೆ ಹಲವು ರೀತಿಯ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.