ಕಿರುತೆರೆಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣದ ನಟಿ ಮಲೈಕಾ ವಸುಪಾಲ್ ಇದೀಗ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಅವರಂತೆಯೇ, ಕಿರುತೆರೆಯಿಂದ ಸಿನಿಮಾರಂಗಕ್ಕೆ ಕಾಲಿಟ್ಟ ನಟಿಯರ ಸಾಲಿಗೆ ಇದೀಗ ಮಲೈಕಾ ಕೂಡ ಸೇರಿಕೊಳ್ಳಲಿದ್ದಾರೆ.
ತಮ್ಮ ಮೊದಲ ಸಿನಿಮಾದಲ್ಲೇ ದೊಡ್ಡ ಬ್ಯಾನರ್ ಜೊತೆಗೆ ಕೆಲಸ ಮಾಡುವ ಅವಕಾಶ ಮಲೈಕಾಗೆ ಒಲಿದುಬಂದಿದೆ.ಸ್ಯಾಂಡಲ್ವುಡ್ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟ ಚಿಕ್ಕಟ. ಹಾಸ್ಯನಟರಾಗಿ ಇದುವರೆಗೂ ಅಭಿಮಾನಿಗಳನ್ನ ರಂಜಿಸಿದ್ದ ಚಿಕ್ಕಣ್ಣ ಇದೀಗ ಹೀರೋ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗ್ಲೆ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರಕ್ಕೆ ಉಪಾಧ್ಯಕ್ಷ ಎಂದು ಟೈಟಲ್ ಇಡಲಾಗಿದೆ.
ಈಗಾಗ್ಲೆ ರಾಬರ್ಟ್, ಹೆಬ್ಬುಲಿ, ಒಂದಲ್ಲಾ ಎರಡಲ್ಲಾ, ಮದಗಜ ದಂತಹ ಅದ್ಭುತ ಸಿನಿಮಾಗಳನ್ನ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ಮಲೈಕಾ ವಸುಪಾಲ್ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ಬ್ಯಾನರ್ನ ಸಿನಿಮಾ ಮೂಲಕ ಮಲೈಕಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಮಲೈಕಾ ಪಾತ್ರ ಹೇಗಿರಲಿದೆ ಎಂಬುದನ್ನ ಮಾತ್ರ ಚಿತ್ರತಂಡವಾಗಲಿ ಅಥವಾ ಮಲೈಕಾ ಆಗಲಿ ಬಿಟ್ಟುಕೊಟ್ಟಿಲ್ಲ. ಸದ್ಯ ಕಿರುತೆರೆ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವ ಉದ್ದೇಶ ಮಲೈಕಾ ಅವರದ್ದು.
ಸದ್ಯ ಈ ಸಿನೆಮಾಗೆ ಸಂಭಾವನೆಯಾಗಿ ಚಿಕ್ಕಣ್ಣ ಸುಮಾರು 35 ಲಕ್ಷ ರು ಪಡೆಯಲಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಹಾಸ್ಯ ಕಲಾವಿದ,ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರ. ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ.
ಚಿಕ್ಕಣ್ಣ 1986,ಜೂನ್ 22 ರಂದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ ಜನಿಸಿದರು.ಮೈಸೂರಿನ ದೃಶ್ಯ ಕಲಾವಿದೆ ತಂಡದಲ್ಲಿ ಕಾಮಿಡಿ ಶೋಗಳನ್ನು ಮಾಡುತ್ತಾ ತಮ್ಮ ಕಲಾಜೀವನ ಆರಂಭಿಸಿದರು. ಈ ತಂಡದ ಮೂಲಕ ಹಲವು ಹಬ್ಬ-ಹರಿದಿನಗಳು ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದ ಚಿಕ್ಕಣ್ಣ ನಂತರ ಉದಯ ಟಿವಿಯಲ್ಲಿ ಒಂದು ಕಾಮಿಡಿ ಶೋನಲ್ಲಿ ಕಾರ್ಯನಿರ್ವಹಿಸಿದರು.
ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಯಶ್ ಕಣ್ಣಿಗೆ ಬಿದ್ದರು. ನಂತರ ಯಶ್ರ `ಕಿರಾತಕ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಹಾಸ್ಯನಟನಾಗಿ ಕಾಲಿಟ್ಟರು.ತದನಂತರ ತೆರೆಕಂಡ `ರಾಜಾ ಹುಲಿ’,`ಅಧ್ಯಕ್ಷ’ ಚಿತ್ರಗಳು ಇವರಿಗೆ ಬಿಗ್ ಬ್ರೇಕ್ ನೀಡಿದವು. ಅಲ್ಲಿಂದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡ ಅಭಿನಯಿಸಿದ್ದಾರೆ.ಇವರಿಗೆ ಖಳನಾಯಕನಾಗಿ ನಟಿಸಬೇಕೆನ್ನುವ ಬಯಕೆ ಇದೆ.