ಸದ್ಯ ದೇಶದಲ್ಲಿ ಕೊರೋನಾ ಎರಡನೆಯ ಅಲೆ ಜೋರಾಗಿದೆ. ತಜ್ಞರ ಸಲಹೆ ಸರಿಯಾಗಿ ಸ್ವೀಕರಿಸದೆ ಸರಕಾರ ಈಗ ದಿಡೀರ್ ಕಟ್ಟುನಿಟ್ಟಿನ ಕ್ರಮಗಳನ್ನು ಹೇರುವ ಮೂಲಕ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಆತಂಕದ ವಾತಾವರಣ ಸ್ರಷ್ಟಿಸಿದ್ದಾರೆ. ಒಟ್ಟಾರೆ ರಾಜ್ಯ್ದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಭೀತಿ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಬೆಂಗಳೂರು ಬಿಟ್ಟು ತಮ್ಮ ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಇನ್ನು ದಿನನಿತ್ಯದ ದುಡಿಮೆ ನಂಬಿಕೊಂಡು ಬದುಕುವವರ ಪರಿಸ್ಥಿತಿ ಹೇಳತೀರದಾಗಿದೆ. ಒಂದೆಡೆ ಇಂತಹವರಿಗೆ ಯಾವುದೇ ಸಹಾಯ ಧನ ನೀಡದೆ ಕೊರೋನಾ ಟಪ್ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಇದೆಲ್ಲದರ ನಡುವೆ ಈಗ ರೇಷನ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಶಾಕಿಂಗ್ ಸುದ್ದಿ ಎದುರಾಗಿದೆ. ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಬಿಗ್ ಶಾಕ್ ನೀಡಿದ್ದು, ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ವಿತರಿಸುತ್ತಿರುವ ಅಕ್ಕಿಪ್ರಮಾಣವನ್ನು ರಾಜ್ಯ ಸರ್ಕಾರ ಮತ್ತೆ ಕಡಿತಗೊಳಿಸಿದೆ.
ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಈ ಹಿಂದೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಿಸಲಾಗುತ್ತಿತ್ತು. ಹೊಸ ಪದ್ಧತಿಯಲ್ಲಿ ಈ ತಿಂಗಳಿನಿಂದ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಹಾಗೂ 2 ಕೆಜಿ ಗೋಧಿ ನೀಡಲು ನಿರ್ಧರಿಸಲಾಗಿದೆ. ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗೆ 15 ಕೆಜಿ ಅಕ್ಕಿ, 20 ಕೆಜಿ ರಾಗಿ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ಅಕ್ಕಿ ಪ್ರಮಾಣ ಕಡಿತಗೊಳಿಸಿರುವುದು ಕಾರ್ಡ್ ದಾರರಿಂದ ಆಕ್ಷೇಪ ವ್ಯಕ್ತವಾಗಿದೆ.
ಇನ್ನು ರಾಗಿ, ಜೋಳ ಬೆಳೆಯುವ ಕರ್ನಾಟಕದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಡಿತರ ಚೀಟಿದಾರರಿಗೆ ಅಕ್ಕಿ ಕಡಿತ ಮಾಡಿ ರಾಗಿ, ಜೋಳ ನೀಡಲು ನಿರ್ಧಾರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸರಕಾರದ ಈ ನಿರ್ಧಾರಕ್ಕೆ ಜನರು ಇದೀಗ ಹಿಡಿಶಾಪ ಹಾಕುತ್ತಿದ್ದಾರೆ.
ಇತರ ರಾಜ್ಯಗಳು ಈ ಹಿಂದೆಯೇ ಲಾಕ್ ಡೌನ್ ಮಾಡುವ ಮುನ್ಸೂಚನೆ ನೀಡಿ ಜನರಿಗೆ ಅವರ ಖಾತೆಗಳಿಗೆ ಹಣ ಸಂದಾಯ ಮಾಡಿ, ಊಟ ಉಪಚಾರದ ವ್ಯವಸ್ಥೆ ಕೂಡ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರ ಇದಾವುದನ್ನು ಮಾಡಿಲ್ಲ ಎಂದು ಜನತೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಇನ್ನು ವಿರೋಧ ಪಕ್ಸದ ನಾಯಕರು ಲಾಕ್ ಡೌನ್ ಹೇರುವ ಮುನ್ನ ಜನರ ಖಾತೆಗೆ ಹಣ ಹಾಕಿ ಎಂದು ಆಗ್ರಹ ಮಾಡಿದ್ದಾರೆ.