Train Facility: ಕರ್ನಾಟಕದಿಂದ ಅಯೋಧ್ಯೆಗೆ ಯಾವ ಸಮಯದಲ್ಲಿ ರೈಲಿಗಳಿವೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಅಯೋಧ್ಯೆ ಗೆ ಪ್ರಯಾಣ ಮಾಡುವವರಿಗಾಗಿ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ
Karnataka to Ayodhya Special Train: ಜನವರಿ 22, ಅಂದರೆ ನಿನ್ನೆ ದೇಶದ ಹೆಮ್ಮೆಯ ದಿನವಾಗಿದೆ, ರಾಮಮಂದಿರ ಉದ್ಘಾಟನಾ (Ram Mandir Inauguration) ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆದಿದ್ದು, ಗಣ್ಯಾದಿ ಗಣ್ಯರು ರಾಮನ ದರ್ಶನ ಪಡೆದರು. ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ಪ್ರತಿಷ್ಠಾಪನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.
ಹಾಗೆಯೆ ಈಗ ರಾಮನ ದರ್ಶನ ಪಡೆಯಲು ಕರ್ನಾಟಕದಿಂದ ಸಾವಿರಾರು ಜನರು ಪ್ರಯಾಣ ನಡೆಸುತ್ತಿದ್ದು, ಕರ್ನಾಟಕದಿಂದ ಅಯೋಧ್ಯೆಗೆ ರೈಲು ಆರಂಭ ಮಾಡಲು ನೈರುತ್ಯ ರೈಲ್ವೆ ವಲಯ ನಿರ್ಧಾರ ಮಾಡಿದೆ. ಈ ಕುರಿತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
![Karnataka to Ayodhya Special Train](https://nadunudi.in/wp-content/uploads/2024/01/Karnataka-to-Ayodhya-Special-Train.png)
ವಿಶೇಷ ರೈಲು ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ
ಅಯೋಧ್ಯೆಗೆ ಪ್ರಯಾಣ ಮಾಡುವ ಕರ್ನಾಟಕದ ಜನತೆಗೆ ರೈಲು ಆರಂಭ ಮಾಡಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ. ವಿಶೇಷ ರೈಲು ಕರ್ನಾಟಕದಿಂದ ಜನವರಿ 31 ರಿಂದ ಆರಂಭವಾಗಲಿದ್ದು, ಈ ಬಗ್ಗೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕೆ.ಕೆ.ಮಹೇಶ್ ಮಾಹಿತಿ ನೀಡಿದ್ದಾರೆ. ಒಟ್ಟು 11 ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದ್ದು ಈ ಪೈಕಿ ಮೂರು ರೈಲುಗಳು ಬೆಂಗಳೂರಿನಿಂದ, ತಲಾ ಎರಡು ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಿಂದ ಹೊರಡಲಿವೆ.
ಶಿವಮೊಗ್ಗ ಮತ್ತು ಬೆಳಗಾವಿಯಿಂದ ತಲಾ ಒಂದು ರೈಲು ಹೊರಡಲಿದೆ ಎಂದು ನೈಋತ್ಯ ರೈಲ್ವೆಯ ಮೂಲ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇವು ಸಾಮಾನ್ಯ ರೈಲುಗಳಾಗಿರುವುದಿಲ್ಲ. ಈ ರೈಲುಗಳನ್ನು ಐಆರ್ಸಿಟಿಸಿ ನಿರ್ವಹಣೆ ಮಾಡುತ್ತದೆ. ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬೇಕು. ಕೌಂಟರ್ನಲ್ಲಿ ಯಾವುದೇ ಟಿಕೆಟ್ಗಳನ್ನು ನೀಡಲಾಗುವುದಿಲ್ಲ. ಹಾಗೆಯೇ ಯಾವುದೇ ಕೊನೆಯ ನಿಮಿಷದ ಬುಕಿಂಗ್ ಕೂಡಾ ಅವಕಾಶವಿಲ್ಲ .
![Train Facility From Karnataka to Ayodhya](https://nadunudi.in/wp-content/uploads/2024/01/Train-Facility-From-Karnataka-to-Ayodhya.png)
ವಿಶೇಷ ರೈಲುಗಳ ವೇಳಾಪಟ್ಟಿಯ ವಿವರ
ಅಯೋಧ್ಯೆಗೆ ಹೋಗಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಜನವರಿ 31, ಫೆಬ್ರುವರಿ 14, ಮತ್ತು 28ರಂದು ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣದಿಂದ ಹೊರಡಲಿರುವ ವಿಶೇಷ ರೈಲು ಅರಸೀಕೆರೆ, ರಾಯದುರ್ಗ, ಹೊಸಪೇಟೆ (ಮಧ್ಯಾಹ್ನ 3ಕ್ಕೆ), ಗದಗ, ವಿಜಯಪುರ ಮಾರ್ಗವಾಗಿ ಅಯೋಧ್ಯೆ ಧಾಮ ತಲುಪಲಿದೆ. ಫೆಬ್ರವರಿ 04, 17, 18 ರಂದು ಮೈಸೂರಿನಿಂದ ಹೊರಡಲಿರುವ ರೈಲು ಬೆಂಗಳೂರು, ಅರಸಿಕೆರೆ, ಹೊಸಪೇಟೆ ಮಾರ್ಗವಾಗಿ ಅಯೋಧ್ಯೆ ತಲುಪಲಿದೆ.
ಫೆಬ್ರವರಿ 07 ಮತ್ತು 21 ರಂದು ತುಮಕೂರಿನಿಂದ ಹಾಗೂ ಫೆ.11 ಮತ್ತು 21 ರಂದು ಚಿತ್ರದುರ್ಗದಿಂದ ಹೊಸಪೇಟೆ ಮಾರ್ಗವಾಗಿ ವಿಶೇಷ ರೈಲುಗಳು ಸಂಚರಿಸಲಿವೆ. ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಫೆ.17ರಂದು ಸಂಜೆ 4.40ಕ್ಕೆ ಹೊಸಪೇಟೆಗೆ ಆಗಮಿಸುವ ರೈಲು ಬಳ್ಳಾರಿ, ರಾಯಚೂರು ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಈ 11 ರೈಲುಗಳು, ಕರ್ನಾಟಕದಿಂದ ಅಯೋಧ್ಯಗೆ ಮತ್ತು ಅಯೋಧ್ಯೆಯಿಂದ ಮರಳಿ ಅದೇ ನಿಲ್ದಾಣಗಳಿಗೆ ಹಿಂದಿರುಗಲಿವೆ ಎಂದು ವೈ.ಯಮುನೇಶ್, ಕಾರ್ಯದರ್ಶಿ ಕೆ.ಕೆ.ಮಹೇಶ್ ಮಾಹಿತಿ ನೀಡಿದ್ದಾರೆ .